Puttakkana Highway
₹350.00
ಪುಸ್ತಕವು ಮೂಲ ಕಥೆಯಿಂದ ಪ್ರಶಸ್ತಿ ವಿಜೇತ ದೃಶ್ಯ ಚಿಕಿತ್ಸೆಯಾಗಿ ಪರಿವರ್ತನೆಗೊಂಡ ಪ್ರಯಾಣದ ಬಗ್ಗೆ ಹೇಳುತ್ತದೆ ಮತ್ತು ನಂತರ ಸ್ಕ್ರಿಪ್ಟ್, ವಿಮರ್ಶೆಗಳು ಮತ್ತು ಚರ್ಚೆಗಳೊಂದಿಗೆ ಪದ ರೂಪಕ್ಕೆ ತಿರುಗುತ್ತದೆ. ಸಂಶೋಧಕರಿಗೆ, ಇದು ಪದಗಳಿಂದ ಸ್ಕ್ರಿಪ್ಟ್ಗೆ ದೃಶ್ಯಗಳಿಗೆ ಮತ್ತು ಪದಗಳಿಗೆ ಹಿಂತಿರುಗುವ ಪ್ರಯಾಣದ ಕಲಿಕೆಯ ಅನುಭವವನ್ನು ನೀಡುತ್ತದೆ. ಚಲನಚಿತ್ರ ರಸಿಕರಿಗೆ ಇದು ಕಥೆಯು ಚಲನಚಿತ್ರವಾಗಿ ಹೇಗೆ ಹೊರಹೊಮ್ಮುತ್ತದೆ ಎಂಬುದರ ರಿಂಗ್ಸೈಡ್ ನೋಟವನ್ನು ನೀಡುತ್ತದೆ. ಅರ್ಥಶಾಸ್ತ್ರಜ್ಞರು ಮತ್ತು ಮಾನವ ಕಾರ್ಯಕರ್ತರಿಗೆ, ಇದು ಅಭಿವೃದ್ಧಿಯ ಸಮಸ್ಯೆಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪುಸ್ತಕದಲ್ಲಿ “ಪುಟ್ಟಕ್ಕನ ಹೈವೇ” ಚಲನಚಿತ್ರದ ಚಿತ್ರಕಥೆ ಮಾತ್ರವೇ ಅಲ್ಲದೆ , ಚಿತ್ರದ ಕುರಿತಂತೆ ಬಂದ ವಿಮರ್ಶೆಗಳು, ಚಿತ್ರವನ್ನು ಕುರಿತಂತೆ ನಡೆದ ಸಂವಾದದ ವಿವರಗಳು, ಚಿತ್ರದ ಡಿವಿಡಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲಕಥೆ “ಪುಟ್ಟಕ್ಕನ ಮೆಡಿಕಲ್ ಕಾಲೇಜ್” ಸಹ ಇದೆ.
Related products
-
Bhashantara Jijnase, Pratyakshike
Author: N T Bhat
“ಭಾಷಾಂತರವೆಂದರೆ ಎರಡು ಭಾಷಿಕರ ನಡುವೆ ಸಂವಹನವನ್ನು ಏರ್ಪಡಿಸುವ ಕಾರ್ಯವಿಧಾನ. ಒಂದು ಭಾಷೆಯಲ್ಲಿ ಕಥಿಸಿದ್ದನ್ನು, ವಿವರಿಸಿದ್ದನ್ನು, ಸಂಭಾಷಿಸಿದ್ದನ್ನು, ಭಾವನೆಗಳನ್ನು ವ್ಯಕ್ತಪಡಿಸಿದ್ದನ್ನು, ವಿಶ್ಲೇಷಿಸಿದ್ದನ್ನು, ವರ್ಣಿಸಿದ್ದನ್ನು, ವಾದಿಸಿದ್ದನ್ನು ಅದಕ್ಕನುಗುಣವಾಗಿ ಇನ್ನೊಂದು ಭಾಷೆಗೆ ಪರಿವರ್ತಿಸುವುದು ಭಾಷಾಂತರವೆಂಬ ಪ್ರಕ್ರಿಯೆ. ಒಂದು ಭಾಷೆಯಲ್ಲಿರುವ ಭಾವಲಹರಿ, ವಿಚಾರಧಾರೆಗಳನ್ನು ಇನ್ನೊಂದು ಭಾಷೆಗೆ ಸ್ಥಳಾಂತರಮಾಡುವುದು ಭಾಷಾಂತರವೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು.”
“ಪ್ರಪಂಚದ ಒಂದು ಮೂಲೆಯಲ್ಲಿ ಕಂಡುಕೊಂಡ ಹೊಸ ಸಿದ್ಧಾಂತಗಳು, ಆವಿಷ್ಕಾರಗಳು ಇನ್ನೊಂದು ಮೂಲೆಯ ಇನ್ನೊಂದು ಭಾಷೆಯನ್ನಾಡುವ ಜನರಿಗೆ ತಲುಪಿದಾಗ ಅವುಗಳ ಪ್ರಯೋಜನವನ್ನು ಪಡೆಯುವ ಜನರ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಪ್ರಪಂಚದಲ್ಲಿ ಹೆಚ್ಚು ಭಾಷೆಗಳನ್ನು ಕಲಿಸಿದಷ್ಟೂ ಭಾಷಾಂತರದ ಅಗತ್ಯ ಕೆಲವು ಸ್ತರಗಳಲ್ಲಿ ಕಡಿಮೆಯಾದೀತು. ಆದರೆ, ಅದರಿಂದಾಗಿ ಭಾಷಾಂತರಗಳಿಗೆ ಅವಕಾಶ ಹೆಚ್ಚುತ್ತಾ ಹೋಗುತ್ತದೆ.’’
– ನೀರ್ಕಜೆ ತಿರುಮಲೇಶ್ವರ ಭಟ್
Interested customers may write to us at mup@manipal.edu about purchasing the book.
Also available on
-
Mahila Mahabharatha
Author: K Madhavan Translator: Abhilasha H
ಮಹಿಳಾ ಮಹಾಭಾರತ, ಇದು ಜೆಎನ್ಯು ದೆಹಲಿಯ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಮಾಧವನ್ ರಚಿಸಿದ ನಾಟಕ. ರಂಗ ನಿರ್ದೇಶಕರೂ ಆಗಿರುವ ಮಾಧವನ್ರನ್ನು ೧೯೯೪ರಲ್ಲಿ ಯೂನಿವರ್ಸಿಟಿ ದು ಕ್ವಿಬೀ ಎ ಮಾನ್ಟ್ರಿಯಲ್ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ರಂಗ ನಿರ್ದೇಶನದ ತರಬೇತಿ ನೀಡಲು ಆಹ್ವಾನಿಸಿತ್ತು. ಆಗ ಒಂದು ವರ್ಷ ನಡೆಸಿದ ರಂಗ ಕಾರ್ಯಾಗಾರದ ಭಾಗವಾಗಿ ೧೯೯೫ ರಲ್ಲಿ ಮಾಧವನ್ ಈ ನಾಟಕವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿದ್ದರು. ನಂತರ ಇದು ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯಾ ಪ್ರದೇಶದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಹಾಗೆಯೇ ಭಾರತದಲ್ಲಿಯೂ ಅನೇಕ ನಗರಗಳಲ್ಲಿ ಈ ನಾಟಕ ಪ್ರದರ್ಶನ ಕಂಡಿದೆ. ೨೦೦೫ರಲ್ಲಿ ಈ ನಾಟಕದ ಇಂಗ್ಲಿಷ್ ಅವತರಣಿಕೆಯು ಥಿಯೇಟರ್ ಇಂಡಿಯಾದಿAದ ಪ್ರಕಟವಾಯಿತು. <br> ಎಲ್ಲ ಕಾಲದ ಮಹಿಳಾ ಜಗತ್ತಿನ ಆಂತರ್ಯದಲ್ಲಿ ನಡೆಯಬಹುದಾದ ಮಹಾಯುದ್ಧದ ಕಥನವೇ ಮಹಿಳಾ ಮಹಾಭಾರತ. ಇಲ್ಲಿ ಪುರಾಣ ಮತ್ತು ವಾಸ್ತವ ಜಗತ್ತಿನ ನಡುವಿನ ಗೆರೆಯೇ ಅಳಿಸಿ, ಪೌರಾಣಿಕತೆ ಮತ್ತು ವಾಸ್ತವಿಕತೆ ಮುಖಾಮುಖಿಯಾಗುತ್ತವೆ. ಮಹಾಭಾರತ ಕಥೆಯ ಪರಿಧಿಯಲ್ಲಿದ್ದಿರಬಹುದಾದ ಎಲ್ಲ ತಾಯಂದಿರೂ ಈ ನಾಟಕದಲ್ಲಿ ಕೇಂದ್ರದತ್ತ ಚಲಿಸಿ ಕತೆ ಹೇಳುತ್ತಾರಾದ್ದರಿಂದ, ಮಹಿಳಾ ಕಣ್ನೋಟದ ಮಹಾಭಾರತ ಇಲ್ಲಿ ಗೋಚರವಾಗುತ್ತದೆ. ವಿಶೇಷವೆಂದರೆ, ಈ ಇಡೀ ಕಥನದ ಸೂತ್ರಧಾರಿಣಿ, ಸಮಕಾಲೀನ ಜಗತ್ತಿನ ಅಸಹಾಯಕ, ಹತಾಶ ತಾಯಿ. ಇಲ್ಲಿ ಪುಟ್ಟ ಪೆಟ್ಟಿಗೆಯಲ್ಲಿ ಜೀವಶಕ್ತಿಯ ಬೀಜ ನೆಟ್ಟು ಅದು ಮೊಳಕೆಯೊಡೆದು ಬೃಹತ್ ವೃಕ್ಷವಾಗಿ ಅಡುಗೆ ಮನೆಯನ್ನೇ ಸ್ಪೋಟಿಸುವ ಹೆಣ್ಣುಗಳಿದ್ದಾರೆ, ಮರಕ್ಕೆ ಕಟ್ಟಿ ಸುಟ್ಟು ಹಾಕುತ್ತಿರುವ ಅಣ್ಣಂದಿರನ್ನೇ ನೋಡಿ ಗಹಗಹಿಸುವ ತಂಗಿಯರಿದ್ದಾರೆ, ಹೆಣ್ಣುಗಳ ನಿಟ್ಟುಸಿರ ತಾಪಕ್ಕೆ ಗುರಿಯಾಗಿ ನಲುಗುತ್ತಿರುವ ಗಂಡುಮಕ್ಕಳ ಸಂಕಟ ಕಂಡು ಮರುಗುತ್ತಿರುವ ತಾಯಂದಿರಿದ್ದಾರೆ. ಆದಿಯಿಂದ ಅಂತ್ಯದವರೆಗೆ ತೂಗುವ ತೊಟ್ಟಿಲು, ಅನುರಣಿಸುವ ಜೋಗುಳದ ಜೊತೆಗೆ ಹೆಮ್ಮಕ್ಕಳು ನೀಡುವ ಶಾಪದ ಸರಮಾಲೆಯೂ ಇಲ್ಲಿದೆ.
Interested readers may write to us at mup@manipal.edu about purchasing the book.
Also available on
-
Aparichita
Translator: Prakash Nayakತರ್ಕವಾಗಲೀ ವಿಜ್ಞಾನವಾಗಲೀ ಮೂಲತಃ ಯಾವ ಅರ್ಥವನ್ನೂ ಅಡಗಿಸಿಕೊಂಡಿರದ ಈ ಅಸಂಬದ್ಧ ಬದುಕನ್ನು ವಿವರಿಸಲಾರವು. ಆದರೆ, ಅದಕ್ಕಾಗಿ ಅತೀಂದ್ರಿಯ ಶಕ್ತಿಯೊಂದನ್ನು ನಂಬುವುದು `ತಾತ್ವಿಕ ಆತ್ಮಹತ್ಯೆ’. ಇಂತಹ ತಾತ್ವಿಕ ಅಥವಾ ದೈಹಿಕ ಆತ್ಮಹತ್ಯೆಗಳು ಜಗತ್ತಿನ ಅರ್ಥರಾಹಿತ್ಯಕ್ಕೆ ಉತ್ತರಗಳಲ್ಲ. ಅಸಂಬದ್ಧತೆಯನ್ನು ಗುರುತಿಸಿ ಬದುಕುವುದೊಂದೇ ಅದಕ್ಕಿರಬಹುದಾದ ಉತ್ತರ ಎಂದು ವ್ಯಾಖ್ಯಾನಿಸಿದ ಫ್ರೆಂಚ್ ಲೇಖಕ, ತತ್ವಜ್ಞಾನಿ ಮತ್ತು ಪತ್ರಕರ್ತ ಆಲ್ಬರ್ಟ್ ಕಮೂ ಬರೆದಿರುವುದು ಕೆಲವೇ ಕಾದಂಬರಿಗಳು ಮತ್ತು ಕೆಲವು ವ್ಯಾಖ್ಯಾನಗಳು. ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾದ ಅಲ್ಬರ್ಟ್ ಕಮೂನ ಸುಪ್ರಸಿದ್ದ ಕಾದಂಬರಿ “ದ ಸ್ಟ್ರೇಂಜರ್” ಕನ್ನಡವೂ ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ಅನುವಾದಗೊಂಡು ಹಲವು ಪೀಳಿಗೆಗಳ ಓದುಗರನ್ನು ವಿವಿಧ ರೀತಿಗಳಲ್ಲಿ ಆಕರ್ಷಿಸುತ್ತ ಬಂದಿದೆ. ೧೯೪೨ರಲ್ಲಿ ಮೊದಲು ಪ್ರಕಟವಾದ ಈ ಫ್ರೆಂಚ್ ಕಾದಂಬರಿ ಕಳೆದ ಎಂಟು ದಶಕಗಳಲ್ಲಿ ಪಡೆದುಕೊಂಡಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ- ಪ್ರತಿಸ್ಪಂದನೆಗಳೂ ವೈವಿಧ್ಯಮಯವಾಗಿವೆ. ಪ್ರತಿವೊಂದು ಪೀಳಿಗೆಯೂ ಈ ಕೃತಿಯನ್ನು ಹೊಸದಾಗಿ ಓದುತ್ತ, ಅನುವಾದಿಸಿಕೊಳ್ಳುತ್ತ, ವಿಮರ್ಶಿಸುತ್ತ, ಇಂಥ ಅನುವಾದಗಳ, ವ್ಯಾಖಾನಗಳ ಒಂದು ಪರಂಪರೆಯೇ ಸೃಷ್ಟಿಯಾಗಿದೆ. ಕನ್ನಡದಲ್ಲಿ ಈ ಮೊದಲೇ, ೧೯೭ ೦ರಲ್ಲಿ, “ಅನ್ಯ” ಎಂಬ ಹೆಸರಿನಲ್ಲಿ ಡಾ. ಡಿ. ಎ. ಶಂಕರ್ ಅವರಿಂದ ಅನುವಾದಗೊಂಡಿದ್ದ ಈ ಕಾದಂಬರಿಯು ಅರ್ಧ ಶತಮಾನದ ನಂತರ ಮತ್ತೆ “ಅಪರಿಚಿತ” ಎಂಬ ಹೆಸರಿನಿಂದ ಶ್ರೀ ಪ್ರಕಾಶ್ ನಾಯಕ್ ಅವರಿಂದ ಹೊಸದಾಗಿ ಅನುವಾದಗೊಂಡು ಈ ಪರಂಪರೆಯನ್ನು ಮುಂದುವರಿಸಿದೆ. ಸ್ವತಃ ಓರ್ವ ಪ್ರತಿಭಾವಂತ ಕತೆಗಾರ-ಕಾದಂಬರಿಕಾರರಾಗಿರುವ ಪ್ರಕಾಶ್ ನಾಯಕ್ ಅವರ ಈ ಸರಳ ಸುಂದರ ಅನುವಾದವು ಕಮೂ ಕೃತಿಯ ಮರು ಓದು-ಹೊಸ ಓದುಗರನ್ನು ಆಹ್ವಾನಿಸುವಂತಿದೆ.Interested customers may write to us at mup@manipal.edu about purchasing the book.
Also available on
-
Ati Sannakathe: Swarupa, Siddhi Mattu Sadhyate
Author: T P Ashoka Translator: Prakash Nayak
ಕಲ್ಪನೆ ಎಂಬುದು ಸತ್ಯಕ್ಕಿಂತ ಹೆಚ್ಚು ಸತ್ಯ, ಕನಸು ಎಂಬುದು ವಾಸ್ತವಕ್ಕಿಂತ ಹೆಚ್ಚು ವಾಸ್ತವ ಎಂಬುದು ಅತಿ ಸಣ್ಣಕತೆಗಳು ನಮಗೆ ಮನದಟ್ಟು ಮಾಡಿಕೊಡುವಂತೆ ಕಾಣುತ್ತವೆ. ಹೆಚ್ಚಿನ ಅತಿ ಸಣ್ಣಕತೆಗಳು ವಾಸ್ತವವಾದೀ ಮಾರ್ಗವನ್ನು ಬಿಟ್ಟುಕೊಟ್ಟಿರುವುದಕ್ಕೆ ಪ್ರಾಯಶಃ ಇದೇ ಕಾರಣ. ವಿವರಣೆ-ವರ್ಣನೆಗಳ ಹಂಗು ಇಲ್ಲದಿರುವುದರಿಂದ ಸಂಕ್ಷಿಪ್ತತೆ ಮತ್ತು ಸಾಂದ್ರತೆಗಳು ಇವುಗಳ ಸಹಜ ಲಕ್ಷಣಗಳಾಗಿವೆ. ಅಂತರಂಗದ ಆಳವನ್ನು, ಅಮೂರ್ತವನ್ನು, ಸಾಂಕೇತಿಕವಾದುದದ್ದನ್ನು ಮತ್ತೊಂದೇ ಸ್ತರದಲ್ಲಿ ಗ್ರಹಿಸಿ ಅಭಿವ್ಯಕ್ತಿಸಲು ಲೇಖಕರಿಗೆ ಈ ಪ್ರಕಾರ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜಗತ್ತಿನ ಎಲ್ಲ ಭಾಷೆಗಳ ದೊಡ್ಡ ಲೇಖಕರು, ದೀರ್ಘವಾದ ಕತೆ-ಕಾದಂಬರಿಗಳನ್ನು ಬರೆದವರನ್ನೂ ಸೇರಿಸಿಕೊಂಡು, ಈ ಪ್ರಕಾರದಲ್ಲಿ ಕೃಷಿಮಾಡಿದ್ದಾರೆ. ತುಂಬ ಸೂಕ್ಷ್ಮವಾದ, ನಾಜೂಕಾದ ಸಂಗತಿಗಳನ್ನು ಸೂಚ್ಯವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಇನ್ನೂ ಕೆಲವು ವೇಳೆ ಮುಚ್ಚಿಟ್ಟು ಹೇಳಲು ಈ ಪ್ರಕಾರವು ತನ್ನ ಸ್ವರೂಪದ ಕಾರಣದಿಂದಲೇ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಪೂರ್ವದ ದಂತಕತೆ, ನೀತಿಕತೆ, ದೃಷ್ಟಾಂತ ಕತೆಗಳ ಆಧುನಿಕ ರೂಪವಾಗಿ ಕಂಡರೂ ಆಶ್ಚರ್ಯವಿಲ್ಲ.
Also available on
eBook available on
-
Wodeyara Kaalada Mysurina Adalitha matthu Saamajika Ithihasa
Author: Pavamana R D, D S Achuta Rao
ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.
Interested readers may write to us at mup@manipal.edu about purchasing the book.
-
The Prince
Author: K N Venkatasubba Rao
ಮೆಖೈವಲ್ಲಿ ನವೋದಯ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ಇಟಲಿಯ ಫ್ಲಾರೆನ್ಸ್ ನಗರದ ಬಡಕುಟುಂಬದಲ್ಲಿ 1469ರಲ್ಲಿ ಜನಿಸಿದ ಮೆಖೈವಲ್ಲಿ ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಮೆಖೈವಲ್ಲಿಯ ಹೊಣೆಯಾಗಿತ್ತು. ಅಧಿಕಾರದ ಗಳಿಕೆ, ಬಳಕೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮನುಷ್ಯ ಪ್ರಪಂಚಕ್ಕೇ ಅನ್ವಯವಾಗಬಲ್ಲಂತಹ ಮಾರ್ಮಿಕವಾದ ಬೃಹತ್ ವಿನ್ಯಾಸ ಅವನೊಳಗೆ ರೂಪುಗೊಳ್ಳುತ್ತಿತ್ತು. ಈ ಸಂದರ್ಭದಲ್ಲೇ ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ತನ್ನ ಜೀವಿತದ ಮುಂದಿನ ದಿನಗಳನ್ನು ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ ಐವತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1527ರಲ್ಲಿ ವಿಧಿವಶನಾದ. 1532ರಲ್ಲಿ ಅಚ್ಚು ಕಂಡ ಅವನ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ 1640ರಲ್ಲಿ ಅಧಿಕೃತವಾಗಿ ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ `ಪ್ರಿನ್ಸಿಪೆ’, `ದ ಪ್ರಿನ್ಸ್ ‘ ಆಗಿ ಮೆಚ್ಚುಗೆ ಮತ್ತು ಟೀಕೆಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಮೆಖೈವಲ್ಲಿ `ಆಧುನಿಕ ರಾಜತಂತ್ರದ ಜನಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವನನ್ನು ಅರ್ಥಶಾಸ್ತ್ರದ ಕರ್ತೃ ಕೌಟಿಲ್ಯನೊಡನೆ ಹೋಲಿಸುವ ವಾಡಿಕೆ ಇದೆ. ಇದು ಎಷ್ಟು ಸಮಂಜಸ ಎಂಬುದರ ಬಗ್ಗೆಯೂ ಪ್ರಾಜ್ಞರ ನಡುವೆ ಜಿಜ್ಞಾಸೆಯಿದೆ.
Interested customers may write to us at mup@manipal.edu about purchasing the book.
Also available on
-
Gombi Maduvi
Author: Revati Nadgir
ಉತ್ತರ ಕರ್ನಾಟಕದ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಈ ಕೃತಿಯಲ್ಲಿ ಬಡ, ಮುಗ್ಧ ಹುಡುಗಿಯೊಬ್ಬಳ ಕನಸುಗಳು, ಮಾನವೀಯತೆಯನ್ನು ಮೆರೆಯುವ ಹಲವು ಪಾತ್ರಗಳ ನಡುವೆ ವಿಧಿಯ ಕೈವಾಡದಿಂದ ಚದುರಿ ಹೋಗುವ, ಅಂತಃಕರಣವನ್ನು ಕಲಕುವ ಚಿತ್ರಣವಿದೆ. ಸ್ಥಳೀಯ ನಂಬಿಕೆ-ಆಚರಣೆ, ಆಶೋತ್ತರಗಳನ್ನು ದಟ್ಟವಾಗಿ ಹೆಣೆದುಕೊಳ್ಳುತ್ತ ಒಂದು ಪುಟ್ಟ ವಿಶ್ವವನ್ನೇ ಈ ನಾಟಕ ಸೃಷ್ಟಿಸುತ್ತದೆ. ರೇವತಿ ನಾಡಗೀರ ಅವರ ಚೊಚ್ಚಲ ಕೃತಿಯಾದ ಇದರಲ್ಲಿ, ಅವರ ಸಹೃದಯತೆ, ಉತ್ತರ ಕರ್ನಾಟಕದ ಸಂಸ್ಕೃತಿಯ ಅನುಭವ ಎದ್ದು ಕಾಣುತ್ತದೆ.
Interested customers may write to us at mup@manipal.edu about purchasing the book.
Also available on
-
Sangeetashastragranthachandrike Volume-2
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.