ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಗಳಿಸಿ, ಗ್ರಾಮೀಣ ಅಭಿವೃದ್ಧಿಯಲ್ಲಿ ಪಿಎಚ್‌ಡಿ ಗಳಿಸಿದವರು. ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಿದ ಕೊತಾಯ, ವಿವಿಧ ಹುದ್ದೆಗಳಲ್ಲಿ ಇಪ್ಪತ್ತೈದು ಕಾಲ ಸೇವೆ ಸಲ್ಲಿಸಿದರು. ರಾಷ್ಟ್ರಾದ್ಯಂತ ’ರುಡ್‌ಸೆಟ್’ ಎಂದೇ ಇಂದು ಪ್ರಖ್ಯಾತವಾಗಿರುವ ಸಂಸ್ಥೆಗಳ ಸ್ಥಾಪಕ ನಿರ್ದೇಶಕ ಹಾಗೂ ಆಡಳಿತ ನಿರ್ದೇಶಕರಾಗಿ ಸಂಸ್ಥೆಗೆ ಅಸ್ತಿವಾರ ಹಾಕಿದರು. ಬ್ಯಾಂಕಿಂಗ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಕೊತಾಯರು, ಡಾ. ಯು. ಆರ್. ಅನಂತಮೂರ್ತಿಯವರ ಸಲಹೆಯ ಮೇರೆಗೆ ‘ಮಾಹೆ’ಯಲ್ಲಿ ‘ಗ್ರಾಾಮೀಣ ಅಧ್ಯಯನ ಕೇಂದ್ರ’ ಆರಂಭಿಸಿ ಹಲವಾರು ಸಂಶೋಧನೆ, ಮೌಲ್ಯಮಾಪನ, ತರಬೇತಿ, ವಿಸ್ತರಣ ಚಟುವಟಿಕೆಗಳನ್ನು ಅನುಷ್ಠಾಾನಗೊಳಿಸಿದರು. ಮುಂದೆ, ಬೆಂಗಳೂರಿನ ‘ಅಝೀಂ ಪ್ರೇಮ್‌ಜಿ’ ವಿಶ್ವವಿದ್ಯಾಾನಿಲಯದಲ್ಲಿ ’ಅಭಿವೃದ್ಧಿ ತಜ್ಞ’ನಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಸರ್ಕಾರದ ಅಬ್ದುಲ್ ನಜೀರ್‌ಸಾಬ್ ಗ್ರಾಾಮೀಣ ಅಭಿವೃದ್ಧಿ ಸಂಸ್ಥೆ ‘ಪಂಚಾಯತ್ ರಾಜ್ ರಾಜ್ಯಸಂಪನ್ಮೂಲ ವ್ಯಕ್ತಿ’ ಎಂದು ಗುರುತಿಸಿದೆ. ಕೃಷಿ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್, ಮಹಿಳಾ ಸಬಲೀಕರಣ, ಉದ್ಯಮಶೀಲತೆ, ಸ್ವಸಹಾಯ ಸಂಘಗಳು, ತರಬೇತಿ, ಮೌಲ್ಯಮಾಪನ, ಸಂಶೋಧನೆಯಲ್ಲಿ ಡಾ. ಕೊತಾಯ ಪರಿಣತಿ ಪಡೆದಿದ್ದಾರೆ. ಯುಎನ್‌ಡಿಪಿ ಪ್ರಾಯೋಜಿತ, ‘ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2008’ ಯ ನೋಡಲ್ ಅಧಿಕಾರಿಯಾಗಿ, ಕೊತಾಯರು ಉಡುಪಿ ಜಿಲ್ಲಾ ವರದಿಗೆ ರಾಷ್ಟ್ರಮಟ್ಟದ ಯುಎನ್‌ಡಿಪಿ ಪ್ರಶಸ್ತಿ ಪಡೆಯುವಲ್ಲಿ ಶ್ರಮ ವಹಿಸಿದ್ದರು. ಸ್ಥಳೀಯ,ರಾಜ್ಯ,ರಾಷ್ಟ್ರ ಮಟ್ಟದ ಸಮ್ಮೇಳನ-ಕಾರ್ಯಾಗಾರಗಳಲ್ಲದೇ, ಮೆಕ್ಸಿಕೋ, ಡಬ್ಲಿನ್, ಬ್ಯಾಂಕಾಕ್, ಮನಿಲಾ, ಬಾರ್ಸಿಲೋನಾಗಳ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರಸಿದ್ಧ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಅಭಿವೃದ್ಧಿ ಸಂಬಂಧಿತ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವರ ‘ರೂರಲ್ ಇಂಡಿಯಾ- ಸರ್ಟನ್ ರಿಫ್‌ಲೆಕ್ಷನ್‌ಸ್‌’ ಎಂಬ ಕೃತಿಯನ್ನು ಜರ್ಮನಿಯ ‘ಲ್ಯಾಂಬರ್ಟ್ ಪಬ್ಲಿಂಗ್ ಆಕಾಡೆಮಿ’ ಹೊರತಂದಿದೆ. ಐಎನ್‌ಎಸ್‌ಓ (INSO) ಸಂಘಟನೆ 2021-22 ರ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಕೃಷ್ಣ ಕೊತಾಯರನ್ನು ಆಯ್ಕೆ ಮಾಡಿದೆ. ಪ್ರಸ್ತುತ ಉಡುಪಿಯ ‘ಪೂರ್ಣಪ್ರಜ್ಞ ಸಂಶೋಧನ ಹಾಗೂ ಅಭಿವೃದ್ಧಿ ಕೇಂದ್ರ’ದ ಮುಖ್ಯಸ್ಥರಾಗಿ ಹಾಗೂ ’ಪೂರ್ಣಪ್ರಜ್ಞ-ರೋಟರಿ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರ’ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • Grama Sannidhya
    ಗ್ರಾಮ ಸಾನ್ನಿಧ್ಯ

    ಗ್ರಾಮ ಭಾರತವೇ ನೈಜ ಭಾರತವೆಂಬ ಉಕ್ತಿಯೊಂದಿದೆ. ಈ ಉಕ್ತಿ ಅತಿಶಯೋಕ್ತಿಯಲ್ಲ.  ಪಂಜಾಬ ಸಿಂಧ, ಗುಜರಾತ, ಮರಾಠ, ದ್ರಾವಿಡ, ಉತ್ಕಲ, ವಂಗ ಎನ್ನುವಾಗ ಅಥವಾ ಸುಜಲಾಂ, ಸುಫಲಾಂ, ಮಲಯಜ ಶೀತಲಾಂ, ಸಸ್ಯಶಾಮಲಾಂ, ಮಾತರಂ… ವಂದೇ ಮಾತರಂ ಎನ್ನುವಾಗ ನಮ್ಮ ಕಣ್ಣೆದುರು ಬಂದು ನಿಲ್ಲುವುದು ಭಾರತದ ವೈವಿಧ್ಯಪೂರ್ಣ ಗ್ರಾಮಗಳು, ಅಲ್ಲಿನ ಜನ-ಅವರ ಜನಜೀವನ. ಬದಲಾದ ಹಾಗೂ ಬದಲಾಗುತ್ತಿರುವ ಭಾರತೀಯ ಸಂದರ್ಭದಲ್ಲಿ, ಕೊಳ್ಳುಬಾಕ, ನಗರೀಕೃತ ನಾಗರೀಕತೆ, ಗ್ರಾಮೀಣ ಬದುಕಿಗಿಂತ ಶ್ರೇಷ್ಠವಾದುದೆಂಬ ಒಂದು ಸಿದ್ಧಾಂತ ಯುವಪೀಳಿಗೆಯನ್ನು ಅನಾವಶ್ಯಕ ಅನುಮಾನಗಳಿಗೆ ತಳ್ಳುತ್ತಿದೆ. ಇದೊಂದು ಅರೆಬೆಂದ ಚಿಂತನೆ. ಭೂತಾನದಂತಹ ರಾಷ್ಟ್ರಗಳಲ್ಲಿ ಮನುಷ್ಯನ ಸಂತೋಷ- ಸಂತೃಪ್ತಿಯನ್ನು ಅವನ ಅಭಿವೃದ್ಧಿ ಮಾಪನವಾಗಿ ಬಳಸಲಾಗುತ್ತಿದೆ. ಈ ತೆರನಾದ ಅಭಿವೃದ್ಧಿ ಪ್ರಕೃತಿ ಸಹ್ಯ ಗ್ರಾಮೀಣ ವಾತಾವರಣದಲ್ಲಷ್ಟೇ ಸಾಧ್ಯ-ಷಹರಗಳಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಪುಸ್ತಕವನ್ನು ರಚಿಸಲಾಗಿದೆ. ಅಂತಿಮವಾಗಿ ಅಭಿವೃದ್ಧಿ’ ಎಂಬ ಪದದ ನಿಜಾರ್ಥವೇನೆಂಬ ಪ್ರಶ್ನೆ’ ಪುಸ್ತಕದುದ್ದಕ್ಕೂ  ಕಾಡುತ್ತ ಹೋಗುತ್ತದೆ. ಹಲವು ವರ್ಷಗಳಿಂದ ಲೇಖಕನನ್ನು ಕಾಡುತ್ತ ಬಂದ ಪ್ರಶ್ನೆ’, ಪುಸ್ತಕದ  ವಿವಿಧ  ಅಧ್ಯಾಯಗಳಲ್ಲಿ ತಲೆ ಎತ್ತಿ, ಗೊಂದಲ ಸೃಷ್ಟಿಸುತ್ತವೆ. ಸುಮಾರು ಆರು ದಶಕಗಳಿಗೂ ಹೆಚ್ಚಿನ ಗ್ರಾಮೀಣ ನೆಲದ ಸಂಪರ್ಕ,  ವಿಶಿಷ್ಟ ಅನುಭವಗಳು, ಅಪಾರ ಸಂದೇಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಗ್ರಾಮೀಣ ಬದುಕಿನ ಅನನ್ಯತೆಯನ್ನು ಅನಾವರಣಗೊಳಿಸುವ ಕಾಯಕವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಐವತ್ತನೆಯ ದಶಕದ ಗ್ರಾಮೀಣ ಬದುಕನ್ನು, ಅಂದಗಾರಿನ ಊರು, ದೇವಸ್ಥಾನ, ಶಾಲೆ, ಗ್ರಾಮೀಣರು, ಅವರ ಬದುಕಿನ ಪರಿ, ಜೀವನಾನುಭವ, ಸ್ನೇಹ ಭಾವ, ಸಜ್ಜನಿಕೆ, ತೃಪ್ತ ಜೀವನ ಇನ್ನಿತರ ವಿವರಗಳೊಡನೆ ದಾಖಲಿಸಲಾಗಿದೆ. ಅದಕ್ಕೆ ಪರ್ಯಯವಾಗಿ, ಬದಲಾದ ಇಂದಿನ ಅಂದಗಾರನ್ನು (2020) ಚಿತ್ರಿಸಲಾಗಿದೆ. ಇದರ ನಡುವೆ ರಾಜ್ಯದ ಬೇರೆ ರಾಷ್ಟ್ರಗಳ ಗ್ರಾಮೀಣ ಬದುಕಿನ ವಿವರಗಳನ್ನು ಕೊಡಲಾಗಿದೆ. ಲೇಖಕನ ಬದುಕಿನಲ್ಲಿ ಹಾದು ಹೋದ ಗ್ರಾಮವರೇಣ್ಯರ ನೆನಪು ಈ ಪುಸ್ತಕದಲ್ಲಿದೆ. ಗಾಂಧೀಜಿ ಪ್ರಣೀತ ಪ್ರಕೃತಿಯೊಡನೆ ಸದಾ ಅನುಸಂಧಾನದಲ್ಲಿರುವ, ಸ್ನೇಹ, ಸಹೃದಯತೆ ಸದಾಚಾರ, ಸಹಬಾಳ್ವೆ, ಸಂತೃಪ್ತಿಯ ತಂಗುದಾಣಗಳಾದ ಸಹಸ್ರಾರು ಹಳ್ಳಿಗಳ ರೂಪಕವೊಂದನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ‘ಗ್ರಾಮ ಸಾನ್ನಿಧ್ಯ’ ಕೃತಿಯಲ್ಲಿದೆ.

    Interested overseas customers may write to us at mup@manipal.edu about purchasing the book.

    Also available on

     

    300.00